ಸಿದ್ದರಾಮಯ್ಯನವರಿಗೆ ಧಮ್ ಇದ್ದರೆ ಖರ್ಗೆ ಮುಂದಿನ ಸಿಎಂ ಎಂದು ಘೋಷಿಸಲಿ | ಜನತಾ ನ್ಯೂಸ್
ಬೀದರ್ : ಕಾಂಗ್ರೆಸ್ ಪಕ್ಷದಲ್ಲಿ ಒಳಜಗಳ ಮಧ್ಯ ದಲಿತ ಮುಖ್ಯಮಂತ್ರಿ ಚರ್ಚೆಯೂ ಪ್ರಾರಂಭವಾಗಿದೆ. ಕಾಂಗ್ರೆಸ್ ಗೆ ಶಕ್ತಿ ಇದ್ದರೆ, ಮಾಜಿ ಸಿಎಂ ಸಿದ್ಧರಾಮಯ್ಯ ಅವರಿಗೆ ಮನಸ್ಸಿದ್ದರೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಂದಿನ ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸವಾಲು ಹಾಕಿದ್ದಾರೆ.
ಬೀದರ್ ಹೊರವಲಯದ ನೌಬಾದ್ನಲ್ಲಿ ನಿರ್ಮಿಸಲಾಗುತ್ತಿರುವ ನೂತನ ಬಿಜೆಪಿ ಜಿಲ್ಲಾ ಕಚೇರಿಯ ಕಾಮಗಾರಿಯನ್ನು ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಸಿದ್ಧರಾಮಯ್ಯನವರು ದಲಿತ ಸಿಎಂಗೆ ಬೆಂಬಲ ಇದೆ ಎನ್ನುತ್ತಾರೆ. ಆದರೆ, ಡಾ. ಜಿ. ಪರಮೇಶ್ವರ ಅವರನ್ನು ಸೋಲಿಸಲು ಎಲ್ಲವನ್ನೂ ಮಾಡಿದ್ದಾರೆ. ಸಿದ್ದರಾಮಯ್ಯನವರು ಹೇಳುವುದೊಂದು, ಮಾಡುವುದೊಂದು; ಅದು ಅವರ ಚಾಳಿ ಎಂದು ಕಟೀಲ್ ಜರಿದರು. ಹಿಂದೆ ಸಿದ್ದರಾಮಯ್ಯನವರು ಅಹಿಂದ ಚಳವಳಿ ಪ್ರಾರಂಭಿಸಿ, ಸಿಎಂ ಆದರು. ಬಳಿಕ ಅಹಿಂದರನ್ನು ಮರೆತರು. ಅವರಿಗೆ ಯಾವುದೇ ಲಾಭ ಮಾಡಲಿಲ್ಲ ಎಂದು ಆರೋಪಿಸಿದರು.
ಪ್ರಜಾಪ್ರಭುತ್ವದಲ್ಲಿ ಮುಂದಿನ ಮುಖ್ಯಮಂತ್ರಿ ನಾನೇ ಎಂದು ಯಾರು ಬೇಕಾದರೂ ಹೇಳಬಹುದು. ಆದರೆ, ಬಿಜೆಪಿಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಪಕ್ಷದ ರಾಷ್ಟ್ರೀಯ ನಾಯಕರು, ಶಾಸಕಾಂಗ ಪಕ್ಷವು ತೀರ್ಮಾನಿಸುತ್ತದೆ. ಇದನ್ನು ಹೀಗೆ ಹೇಳುವವರ ಗಮನದಲ್ಲಿರಬೇಕು. ನಮ್ಮ ಪಕ್ಷದ ವಿಚಾರ, ಸಿದ್ಧಾಂತ ಗಮನದಲ್ಲಿರಬೇಕು ಎಂದು ಕಿವಿ ಮಾತು ಹೇಳಿದರು. ಬಿಜೆಪಿಯಲ್ಲಿ ನಾನೇ ಮುಂದಿನ ಸಿಎಂ ಎಂದು ಬಸವರಾಜ ಪಾಟೀಲ್ ಯತ್ನಾಳ್ ಹೇಳುತ್ತಿದ್ದಾರಲ್ಲ ಎನ್ನುವ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯಿಸಿದರು.